Monday 12 September 2022

ಶ್ರೀಹರಿ ಇಚ್ಛೆ 🙏🙏


.

*ಕೃಷ್ಣ ಯಾರನ್ನು ಪೂಜಿಸುತ್ತಾನೆ ಗೊತ್ತೇ*  



ಕೃಷ್ಣ ಹದಿನಾರು ಸಾವಿರದ ಎಂಟು ಹೆಣ್ಣುಮಕ್ಕಳನ್ನು ಮದುವೆಯಾಗಿದ್ದಾನೆ.  ಇವನ ಸಂಸಾರ ಹೇಗಿರಬಹುದು ಎಂಬ ಕುತೂಹಲಕ್ಕೆ ನಾರದರು ಭೂಲೋಕಕ್ಕೆ ಬಂದರು.  ದ್ವಾರಕಾ ನಗರಿಯನ್ನು ಪ್ರವೇಶಿಸಿದರು.  ಅವರಿಗೆ ವಿಶೇಷ ಸ್ವರೂಪಗಳ ಬೃಹತ್ ನವನಗರವೇ ಕಣ್ಣಿಗೆ ಬಿತ್ತು. ದೊಡ್ಡ ದೊಡ್ಡ ಕಟ್ಟಡಗಳು, ಅಲ್ಲಲ್ಲಿ  ಸತ್ರ, ದೇವಾಲಯಗಳು, ಕಮಲಗಳಿಂದ ತುಂಬಿರುವ ಸರೋವರಗಳು,  ಹೂವಿನಿಂದ ಅಲಂಕರಿಸಿಕೊಂಡಂತಿರುವ ಉದ್ಯಾನವನಗಳು,  ಅತ್ಯಾಕರ್ಷಕ ಮನೆಗಳು.  ಮನೆಯೆದುರು ಇರುವ ಹೂತೋಟ, ಅವುಗಳಲ್ಲಿ ಹೂವುಗಳರಳಿ ಮೈದುಂಬಿ ನಿಂತಿದ್ದವು.  ಅವುಗಳ ಎದುರು ನೃತ್ಯಮಾಡುವ ದುಂಬಿಗಳು.  ಮನೆ ಹಿಂಭಾಗದಲ್ಲಿ ಕೊಟ್ಟಿಗೆ.  ಕೊಟ್ಟಿಗೆಯ ತುಂಬಾ ದನಕರುಗಳು.  


ನಾರದ ಒಂದು ಮನೆಯೊಳಗೆ ಬಂದ.  ಅಬ್ಬಬ್ಬಾ ಅದೇನು ವೈಭವ.  ಮೆನೆಯ ಗೋಡೆಗಳೆಲ್ಲ ಸ್ಫಟಿಕ.  ಚೌಕಟ್ಟುಗಳೆಲ್ಲಾ ಬಂಗಾರದವು.  ಕಂಬಗಳು ಹವಳ, ವಜ್ರ, ವೈಢೂರ್ಯಗಳಿಂದ ತುಂಬಿತ್ತು.  ಒಂದು ಕೋಣೆಯಲ್ಲಿ ಕೃಷ್ಣ ತನ್ನ ಮಗನನ್ನು ತೊಡೆ ಮೇಲೆ ಮಲಗಿಸಿ ತಟ್ಟುತ್ತಿದ್ದ.  ಅವನ ಹೆಂಡತಿ ಪೂಜೆಗೆ ಅಣಿ ಮಾಡುತ್ತಿದ್ದಳು.   ಹೋ ನಾರದರೇ ಬನ್ನಿ ಪೂಜ್ಯರೇ,  ಎಂದು ಕೃಷ್ಣ ಕರೆದ.  ಮಗು ತುಂಬಾ ಹಟ ಮಾಡುತ್ತಿದೆ.  ಮಲಗಿಸಿ ಬರುತ್ತೇನೆ.   ಆಸೀನರಾಗಿ, ಇಗೋ ಬಂದೆ ಎಂದು ಹೇಳಿದ.  


ನಾರದರಿಗೆ ಆಶ್ಚರ್ಯ, ಇರು ಕೃಷ್ಣ, ನೀನು ಮಗುವನ್ನು ಮಲಗಿಸುತ್ತಿರು.  ನನಗೆ ಸ್ವಲ್ಪ ಕೆಲಸವಿದೆ ಎಂದು ಪಕ್ಕದ ಮನೆಗೆ ಹೋದರು.  ಆ ಮನೆಯೂ ಅತ್ಯದ್ಭುತ.   ಅಲ್ಲಿ ಎರಡನೆಯವಳು ತನ್ನ ಮಕ್ಕಳಿಗೆ ತಿಂಡಿ ಬಡಿಸುತ್ತಿದ್ದಳು.  ಕೃಷ್ಣ ಒಳಗಡೆ ಪೂಜೆ ಮಾಡುತ್ತಿದ್ದ.  ನಾರದ ಬಂದಿರುವುದನ್ನು ನೋಡಿ ಪೂಜೆಯಿಂದ ಎದ್ದು, ಬನ್ನಿ ಪೂಜ್ಯರೇ, ನನ್ನಿಂದೇನಾಗಬೇಕಿತ್ತು.  ನಾರದರು ಸ್ವಲ್ಪ ಕೆಲಸವಿದೆ ಎಂದು  ಮೂರನೇ ಮನೆಗೆ ಬಂದರು.  ಕೃಷ್ಣ ಹಾಲು ಕರೆಯುತ್ತ ಕುಳಿತಿದ್ದ.  ನಾಲ್ಕನೇ ಮನೆಯಲ್ಲಿ ಕೃಷ್ಣ ಸ್ನಾನಕ್ಕೆ ಹೋಗಿದ್ದ. ನ್ಐದನೇ ಮನೆಯಲ್ಲಿ ಕೃಷ್ಣ ಮಕ್ಕಳಿಗೆ ಸ್ನಾನ ಹಾಕುತ್ತಿದ್ದ.  ಆರನೇ ಮನೆಯಲ್ಲಿ ಕೃಷ್ಣ ಹೆಂಡತಿಯ ತರುಬಿಗೆ ಹೂ ಮುಡಿಸುತ್ತ ಶೃಂಗಾರ ಕಾವ್ಯ ಹಾಡುತ್ತಿದ್ದ.  ಇನ್ನೊಂದು ಮನೆಯಲ್ಲಿ ಕೃಷ್ಣ ಬಲರಾಮನೊಂದಿಗೆ ರಾಜಕಾರ್ಯದ ವಿಚಾರಗಳಲ್ಲಿ ಮಙ್ನನಾಗಿದ್ದ.  ಮತ್ತೊಂದು ಮನೆಯಲ್ಲಿ ಕೃಷ್ಣ ವಸುದೇವ ದೇವಕಿಯರ ಸೇವೆ ಮಾಡುತ್ತಿದ್ದ.  .ಎಲ್ಲರ ಮನೆಯಲ್ಲಿಯೂ ಕೃಷ್ಣ ನಾರದರನ್ನು ನೋಡಿ,  ಬನ್ನಿ ಬನ್ನಿ ಪೂಜ್ಯರೇ ಎಂದು ಈಗಿನ್ನೂ ನೋಡುತ್ತಿದ್ದಾನೆಯೋ ಎಂಬಂತೆ ಉಪಚರಿಸುತ್ತಿದ್ದ...........ಸಂಜೆಯ ತನಕ ಎಲ್ಲರ ಮನೆಯನ್ನು ಸುತ್ತಾಡಿ ಬಂದರು.  ಎಲ್ಲರ ಮನೆಯಲ್ಲಿಯೂ ಕೃಷ್ಣನಿದ್ದಾನೆ.  ಇನ್ನು ಉಳಿದಿರುವುದು ಕಟ್ಟಕಡೆಯ ಮನೆ.   ಅಲ್ಲಿಗೆ ಉಸ್ಸಪ್ಪ ಎಂದು ಬಂದು ಕೂತರು.  ಕೃಷ್ಣ ಮಡಿಯುಟ್ಟು ಪೂಜೆಗೆ ಸಿಧ್ಧಗೊಳ್ಳುತ್ತಿದ್ದ.


ಬನ್ನಿ ನಾರದರೇ... ಏನು ವಿಶೇಷ.  ಇಲ್ಲೀವರೆಗೆ ಆಗಮಿಸಿದ್ದುದರ ಕಾರಣವೇನು... ಒಳ್ಳೇ ಸಮಯಕ್ಕೇ ಬಂದಿದ್ದೀರಿ.  ಇನ್ನೇನು ಪೂಜೆ ಮಾಡುವವನಿದ್ದೆ.  ನಿಮ್ಮಂತಹ ಙ್ನಾನಿಗಳು ಬಂದಿರುವುದು ನನ್ನ ಭಾಗ್ಯ.  ಬನ್ನಿ ಆರತಿ ಮಾಡೋಣ ಎಂದು ಕರೆದ.


’ ಹೇ ಕೃಷ್ಣ.  ನೀನೇ ಸೃಷ್ಟಿಕರ್ತನಿದ್ದೀಯ.  ಈ ಸೃಷ್ಟಿ, ಸ್ಥಿತಿ ಲಯಗಳ ಕಾರಣಕರ್ತನಾಗಿದ್ದೀಯ.  ಎಲ್ಲದಕ್ಕೂ ನೀನೇ ಸರ್ವಸ್ವ.  ಹೀಗಿರುವಾಗ ನೀನು ಯಾರನ್ನು ಪೂಜಿಸುವುದು !!!


’ಕೃಷ್ಣ ನಕ್ಕುಬಿಟ್ಟ.   ನಾರದರೇ. ನಾನು ಪ್ರತಿನಿತ್ಯ ಪೂಜೆ ಮಾಡುತ್ತೇನೆ.  ಅದು ಯಾರು ಎಂದು ನೋಡಬೇಕೇನು ’


ನಾರದರು ಆಶ್ಚರ್ಯದಿಂದ ಕೇಳಿದರು. ’ ನೀನು ಪೂಜಿಸುವ ಆ ಶಕ್ತಿ ಯಾವುದು ಎಂದು ನೋಡಬೇಕು ’


ಕೃಷ್ಣ : ಬನ್ನಿ ತೋರಿಸುತ್ತೇನೆ.  ಎಂದು ದೇವರ ಕೋಣೆಗೆ ಕರೆದೊಯ್ದ.   ದೇವರ ಕೋಣೆಯ ಚೌಕಟ್ಟುಗಳು ಬಂಗಾರದ್ದಾಗಿತ್ತು.  ಮಂಟಪವೂ ಬಂಗಾರ.  ಮಂಟಪಕ್ಕೆ ವಜ್ರ, ವೈಢೂರ್ಯ, ಮುತ್ತು ರತ್ನಗಳಿಂದ ಅಲಂಕರಿಸಲಾಗಿತ್ತು.  ಮಂಟಪದ ಒಳಗೆ ಏಳೆಂಟು ಬಂಗಾರದ ಡಬ್ಬಿಗಳಿದ್ದವು.  ಕೃಷ್ಣ ಡಬ್ಬಿಗಳನ್ನು ತೋರಿಸಿ ಇವುಗಳನ್ನೇ ಪೂಜಿಸುತ್ತೇನೆ’ ಎಂದ.


’ಈ ಡಬ್ಬಿಯೊಳಗೆ ಏನಿದೆ ? ’ ನಾರದರಿಗೆ ಕುತೂಹಲ.


ಕೃಷ್ಣ ಡಬ್ಬಿಯ ಮುಚ್ಚಳ ತೆಗೆದ.  ಅದರಲ್ಲಿ ಮಣ್ಣಿತ್ತು.  ನಾರದರು ಬಿಟ್ಟಕಣ್ಣಿಂದ ಮಣ್ಣು ನೋಡಿ 

’ ಕೃಷ್ಣ ನೀನು ಮಣ್ಣನ್ನು ಪೂಜಿಸುತ್ತೀಯೇ ? ’


ಕೃಷ್ಣ ಹೇಳಿದ.  ’ ನಾರದರೇ.  ಇದು ಅಂತಿಂಥ ಮಣ್ಣು ಎಂದು ತಿಳಿಯಬೇಡಿ.   ಇದು ನನ್ನ ಭಕ್ತರ ಪಾದಧೂಳಿ.  ಇದನ್ನು ನಾನು ಪೂಜಿಸುತ್ತೇನೆ.  ಭಕ್ತರ ಪ್ರೀತಿ, ಭಕಿಯ ಪಾಶದ ಅಂಕುರದೊಳಗೆ ನಾನಿದ್ದೇನೆ ’ ಎಂದ.


ನಾರದರಿಗೆ ಇದನ್ನು ಕೇಳಿ ಕಣ್ಣೀರು ಧಾರೆಯಾಗಿ ಸುರಿಯಿತು.  ಹೇ ಪರಮಾತ್ಮ.. ನಿನ್ನನ್ನು ಎಷ್ಟು ಸ್ತ್ರುತಿಸಿದರೂ ಅದು ಅಲ್ಪವೇ.  ಕೃಷ್ಣ ಕೃಷ್ಣ.... ಎಂದು ನೂರು ಬಾರಿ ಹೇಳಿದರು.


ಮತ್ತೊಂದು ಡಬ್ಬಿಯಲ್ಲೇನಿದೆ ಎಂದು ಕೇಳಿದರು.


ಕೃಷ್ಣ ಅದನ್ನೂ ತೆರೆದು ತೋರಿಸಿದ.  ಇದು ಋಷಿ ಮುನಿಗಳ ಪಾದ ಧೂಳಿ.  ಮತ್ತೊಂದರಲ್ಲಿರುವ ಮಣ್ಣನ್ನು ತೋರಿಸಿ, ಇವುರುಗಳು ನನ್ನನ್ನೇ ನೆನೆಯುತ್ತ ಇಹಲೋಕದಲ್ಲಿ ಅಲ್ಪಾಯುಷಿಗಳಾಗಿದ್ದು, ಅನೇಕ ಕಷ್ಟಕಾರ್ಪಣ್ಯಗಳು ಬಂದೊದಗಿದ್ದರೂ ನನ್ನನ್ನೇ ಧ್ಯಾನಿಸುತ್ತ ನನ್ನಲ್ಲೇ ಐಕ್ಯರಾದವರ ಪಾದಧೂಳಿ.  ಇದು ಬಡ ಬ್ರಾಹ್ಮಣರ ಪಾದಧೂಳಿ....ಗೋ ಸೇವೆಯನ್ನು ಮಾಡುತ್ತ.. ಲೋಕ ಕಲ್ಯಾಣಕ್ಕಾಗಿ, ಙ್ನಾನಾರ್ಜನೆಯನ್ನೇ ಜೀವನವನ್ನಾಗಿಸಿಕೊಂಡವರ ಪಾದಧೂಳಿ.....ಹೀಗೆ ಸಾಗಿತ್ತು ತನ್ನ ಭಕ್ತರ ಪಾದಧೂಳಿಗಳ ಕಥೆ.  ನಾರದರಿಗೆ ಆನಂದ ಭಾಷ್ಪವುಕ್ಕಿ ಉಕ್ಕಿ ಹರಿಯುತ್ತಿತ್ತು.  ಕಟ್ಟ ಕಡೆಯಲ್ಲಿ ಒಂದು ಸಣ್ಣ ಡಬ್ಬಿಯಿತ್ತು.  


ನಾರದರು ಹೇಳಿದರು. ’ ಕೃಷ್ಣ. ನೀನು ಹೇಳುವುದನ್ನು ಕೇಳುತ್ತ ನಾನು ಕರಗಿಹೋಗಿದ್ದೇನೆ.  ಮನತುಂಬಿ ಬರುತ್ತಿದೆ.  ನೀನು ಭಕ್ತವತ್ಸಲ. ನೀನೇ ಭಕ್ತರಕ್ಷಕ.   ಮನಸ್ಸು ಆನಂದದಿಂದ ಕೂಡಿದೆ.  ಕಣ್ಣೀರು ಧಾರೆಯಾಗಿ ಹರಿಯುತ್ತಿದೆ.  ಸಾಕು ಪರಮಾತ್ಮ.  ನಿನ್ನ ಪಾದಕ್ಕೆ ನಮೋನ್ನಮಃ.. ನನಗೆ ನಿನ್ನ ಪಾದ ದರ್ಷನವಾಯಿತಲ್ಲ.  ನಾನು ಸದಾ ನಿನ್ನ ಧ್ಯಾನದಲ್ಲಿರುವಂತೆ ನನ್ನನ್ನು ಆಶೀರ್ವದಿಸು ’ ಎಂದು ಶಿರಸಾಷ್ಟಾಂಗ ನಮಸ್ಕರಿಸಿದರು.  ಅವನ ಪಾದಕ್ಕೆ ಹಣೆತಾಕಿಸಿ ಬಿದ್ದುಕೊಂಡೇ ಇದ್ದರು.  ಏಳುವ ಮನಸ್ಸೇ ಇರಲಿಲ್ಲ.  ಕೃಷ್ಣನೇ ಪ್ರೀತಿಯಿಂದ ಅವರನ್ನು ಎಬ್ಬಿಸಿದ.


’ನಾರದರೇ ಈ ಕಡೇ ಡಬ್ಬಿಯಲ್ಲೇನಿದೆ ನೋಡುವುದಿಲ್ಲವೇ ? ’


’ಸಾಕು ಕೃಷ್ಣ.  ನಿನ್ನನ್ನು ಅರಿಯುವುದು, ನಿನ್ನ ದರ್ಷನವಾಗುವುದಕ್ಕಿಂತ ಮಿಗಿಲಾದದ್ದು ಇನ್ನೇನಿದೆ.  ನಿನ್ನನ್ನೇ ಧ್ಯಾನಿಸುವುದೇ ನನಗೆ ಬಂದ ಭಾಗ್ಯ.  ಇಷ್ಟು ಸಾಕು ಈ ನಾರದನಿಗೆ’ ಎಂದರು


ಎಲ್ಲವನ್ನೂ ತಿಳಿಯಲೇ ಬೇಕಲ್ಲವೇ ನಾರದರೇ.  ನೋಡಿ ಕಟ್ಟ ಕಡೆಯ ಡಬ್ಬಿ ಎಂದು ಅದರ ಮುಚ್ಚಳ ತೆಗೆದ.  ಅದರಲ್ಲಿ ಒಂದು ಚಿಟಿಕೆ ಮಣ್ಣಿತ್ತು.  ನಾರದರು ಆಶ್ಚರ್ಯದಿಂದ ಕೇಳಿದರು. 

’ ಒಂದು ಚಿಟಿಕೆ ಇದೆಯಲ್ಲ ಯಾರದ್ದು ’


ಕೃಷ್ಣ ಹೇಳಿದ.  ’ ಸದಾ ನನ್ನ ಧ್ಯಾನದಲ್ಲಿಯೇ ಸಂಚಾರಿಯಾಗಿರುವ ನನ್ನ ಪರಮ ಭಕ್ತನಾದ ನಾರದರ ಪಾದಧೂಳಿ’


ನಾರದರಿಗೆ ದುಃಖ ತಡೆಯಲಾರದೇ ಹೇ ಪ್ರಭೋ....... ಎಂದು ಕೃಷ್ಣನ ಪಾದ ಹಿಡಿದರು............. ಹರೇ ಕೇಶವ ನಾರಾಯಣ 🙏 ಲೋಕಾ ಸಮಸ್ತ ಸುಖಿನೋ ಭವಂತು 🙏🙏🚩🚩🚩🚩🚩🚩

No comments:

Post a Comment